Thursday, February 12, 2026

ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ನೆನಪು......



ಅವರ ಹತ್ತಿರ ನಾನು ಕಳೆದ ೫ ವರ್ಷಗಳು ಹಾಗು ಈಗಲೂ ಕೇಳುವ ಅವರ ದನಿ ಸದಾ ಜೊತೆಗಿದೆ. ಮಣಿಪಾಲಕ್ಕೆ ಬೆಂಗಳೂರಿನ ಮಾಕ್ಮಿಲನ್ ಸಂಸ್ಥೆಯ ಉದ್ಯೋಗಿಯಾಗಿ ವರ್ಗವಾದಾಗ ಅವರ ಕಾದಂಬರಿ ಹಾಗು ಕೆಲವು ಲೇಖನಗಳನ್ನು ಮಾತ್ರ ಓದಿದ್ದೆ. ಆಕಾಶವಾಣಿಯಲ್ಲಿ ಮಾತು ಆಲಿಸಿದ್ದೆ, ಆದರೆ ನೋಡಿರಲಿಲ್ಲ. ಎರಡೇ ದಿನದಲ್ಲಿ ಅವರು ಆತ್ಮೀಯರಾದರು. ನಮ್ಮಣ್ಣನ ವಯಸ್ಸು, ಗಂಭೀರ ಆದರೆ ಗಡಸು ಅಲ್ಲದ ಮುಖ, ಮಗುವಿನಂಥ ನಗೆ, ನಿರರ್ಗಳ, ವಿದ್ವತ್ಪೂರ್ಣ, ಸ್ನೇಹಮಯ ಮಾತು, ಹರಟೆಯಲ್ಲೂ ಕಾವ್ಯ ಸೌಂದರ್ಯ ಅವರತ್ತ ದಿನವೂ ಸೆಳೆಯುತ್ತಿತ್ತು. ಕಾಮತ್ ಹೋಟೆಲಿನಲ್ಲಿ ಚಹಾ ಕುಡಿಯುವಷ್ಟು ಆತ್ಮೀಯತೆ ಬೆಳೆದು, ಅಂಬಲಪಾಡಿಯ ಮನೆಗೂ ಆಗಾಗ ಹೋಗುವ ಭಾಗ್ಯ ಒದಗಿತು. ಅವರಲ್ಲಿ ನಾನು ಮಾತನಾಡದ ವಿಷಯವೇ ಇರಲಿಲ್ಲ.
ಎರಡೂ ಬದಿಯ ಬೆರಳುಗಳಿಂದ ಸುಂದರವಾಗಿ ಬರೆಯಬಲ್ಲ, ಸ್ವಾರಸ್ಯಪೂರ್ಣವಾಗಿ ಹರಟೆಯಲ್ಲಿ ಭಾಗವಹಿಸುತ್ತಲೇ ತಮ್ಮ ಬರವಣಿಗೆ ಕೆಲಸ ಮುಗಿಸುತ್ತಿದ್ದ ಗೋವಿಂದಾಚಾರ್ಯರು ನನ್ನ ಹಿರಿಯ ಗುರು- ಮಿತ್ರರಾದದ್ದು ಹೀಗೆ.
ಅವರು ಆ ಮೊದಲು ಪ್ರಕಟಿಸಿದ್ದ ಆನಂದಮಾಲಾ- ಶ್ರೀ ಮಧ್ವರ ಅನುಭಾಷ್ಯಕ್ಕೆ ವಾಮನ ಪಂಡಿತರ ವ್ಯಾಖ್ಯಾನ ನನ್ನ ಹತ್ತಿರ ಇದ್ದಿತು, ಓದಲು ಪ್ರಯತ್ನಪಟ್ಟಿದ್ದೆ. ಇದರಿಂದ ಅವರಲ್ಲಿ ಸಾಹಿತ್ಯದಷ್ಟೇ ವೇದಾಂತದ ಬಗ್ಗೆ ಚರ್ಚಿಸುವ ಅವಕಾಶಗಳು ಒದಗಿದ್ದವು. ಎಂಥಾ ಮೂರ್ಖ ಪ್ರಶ್ನೆ ಕೇಳಿದರೂ, ನಗುತ್ತಲೇ ಉತ್ತರಿಸುತ್ತಿದ್ದ ಅವರ ಬಗೆ ಸದಾ ಅನುಕರಣೀಯ. ಅವರಿಗೆ ಕೋಪ ಬಂದದ್ದು ನಾನು ಕಾಣೆ. ಯಾವ ಪ್ರಶ್ನೆಗೂ ತಡವರಿಸದೆ, ಪುಸ್ತಕ ನೋಡದೆಯೇ ಅದ್ಭುತ ಸಮಾಧಾನಕರ ಉತ್ತರ ಅವರಿಂದ ಬರುತ್ತಿದ್ದ ಬಗೆ ಸ್ಮರಣೀಯ. ಡಾ. ನರಸಿಂಹಸ್ವಾಮಿ, ಪ್ರೊ, ಬಿವಿ ಕೃಷ್ಣಮೂರ್ತಿ ( ಮಧ್ವಾಚಾರ್ಯ ಚಿತ್ರದ ಅಚ್ಯುತ ಪ್ರಜ್ಞರು), ನಿಟಿಲಾಪುರ ಕೃಷ್ಣಮೂರ್ತಿ ಇವರು ನಮ್ಮ ಹರಟೆಯಲ್ಲಿ ಹಲವೊಮ್ಮೆ ಭಾಗಿ.
ಅವರು ಆಗಾಗ ಪ್ರವಚನ ಪ್ರವಾಸಕ್ಕೆಎಂದು ಮುಂಬೈ, ರಾಯಚೂರು, ಹುಬ್ಬಳ್ಳಿ, ಧರ್ಮಸ್ಥಳ ಇಲ್ಲಿಗೆ ತೆರಳಿದಾಗ ಅದು ದುರ್ದಿನ ಎನಿಸುತ್ತಿತ್ತು. ಅವರ ಮಾತು ಎಂದಿಗೂ ಬೇಸರ ತರುತ್ತಿರಲಿಲ್ಲ. ತಮ್ಮ ಬರವಣಿಗೆಯ ಜೊತೆಜೊತೆಗೆ ನಾನೇ ಅವರ ಅಮೂಲ್ಯ ಸಮಯ ವ್ಯರ್ಥ ಮಾಡುತಿದ್ದೇನೋ ಎನ್ನುವ ಅಪರಾಧ ಪ್ರಜ್ಞೆ ಆಗಾಗ ಕಾಡುತ್ತಿದ್ದರೂ, ಅವರು ನನ್ನ ಪ್ರಶ್ನೆ, ಮಾತುಗಳನ್ನು ಆಲಿಸುತ್ತಿದ್ದ ರೀತಿ ಇನ್ನು ಹೆಚ್ಚು ಮಾತು ಮುಂದುವರೆಸಲು ಪ್ರೋತ್ಸಾಹಿಸುತ್ತಿತ್ತು. ಮುಂದೆ ಇದೆ ಅವರು ನನ್ನನ್ನು ಉಪನಿಷದ್ ಪಾಠಕ್ಕೆ ಹೋಗುವ ಅನುಮತಿಗೆ ಕಾರಣವಾಯಿತು.

No comments:

ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ನೆನಪು......

ಅವರ ಹತ್ತಿರ ನಾನು ಕಳೆದ ೫ ವರ್ಷಗಳು ಹಾಗು ಈಗಲೂ ಕೇಳುವ ಅವರ ದನಿ ಸದಾ ಜೊತೆಗಿದೆ. ಮಣಿಪಾಲಕ್ಕೆ ಬೆಂಗಳೂರಿನ ಮಾಕ್ಮಿಲನ್ ಸಂಸ್ಥೆಯ ಉದ್ಯೋಗಿಯಾಗಿ ವರ್ಗವಾದಾಗ ಅವರ ಕಾದಂಬ...